Thursday, June 18, 2009

ರಾಮ ವಾಲಿಯನ್ನು ಮರೆಯಿಂದ ಕೊಂದಿದ್ದು ಸರಿ?

ಯಾರೇ ತನ್ನೆದುರಿಗೆ ಯುದ್ಧಕ್ಕೆ ಬಂದರೂ ಅವರ ಅರ್ಧ ಶಕ್ತಿ ತನಗೆ ಬರಬೇಕು ಎನ್ನುವ ವರವನ್ನು ವಾಲಿ ಪಡೆದಿದ್ದು ನಮಗೆ ಗೊತ್ತೇ ಇದೆ. ಅದಕ್ಕೆ ಅವನು ಸುಗ್ರೀವನ ಹೆಂಡತಿಯನ್ನು ಇಟ್ಟುಕೊಂಡರೂ ಸುಗ್ರೀವ ಅಸಹಾಯಕನಾಗಿ ರಾಮನ ಸಹಾಯ ಬೇಡಿದ. ರಾಮ ಒಪ್ಪಿ, ನೀವಿಬ್ಬರೂ ಹೊಡೆದಾಡುವಾಗ ನಾನು ಮರೆಯಲ್ಲಿ ನಿಂತು ವಾಲಿಯನ್ನು ಕೊಲ್ಲುತ್ತೇನೆ ಎಂದ. ಹಾಗೆಯೇ ಮಾಡಿದ ಕೂಡ.
ರಾಮ ಬಾಣವೇನೋ ಬಿಟ್ಟ. ವಾಲಿಗೆ ಪೆಟ್ಟಾಗಿ ಮರಣಶಯ್ಯೆಗೆ ಹೋದ. ರಾಮನನ್ನು ನೋಡಿ ವಾಲಿ ಹೇಳಿದ. "ನಾವು ಮೃಗಗಳು. ನಿಮ್ಮ ಹಾಗೆ ಮನುಷ್ಯರಲ್ಲ. ನಮ್ಮಲ್ಲಿ ನಿಮ್ಮ ಹಾಗೆ ಒಂದು ಹೆಣ್ಣಿಗೆ ಒಂದು ಗಂಡು ಅನ್ನುವ ನಿಯಮ ಇಲ್ಲ." ಪಶ್ಚಾತ್ತಾಪಗೊಂಡ ರಾಮ "ಹಾಗಾದರೆ ನಂಗೆ ಮುಂದಿನ ಜನ್ಮದಲ್ಲಿ ಹೀಗೆಯೇ ಸಾವು ಬರಲಿ" ಅಂದ. ಅದಕ್ಕೆ ಕೃಷ್ಣಾವತಾರದಲ್ಲಿ ಅರಳಿ ಮರದ ಕಟ್ಟೆಯ ಮೇಲೆ ಕೃಷ್ಣ ಕುಳಿತಾಗ ಅವನ ಕಾಲನ್ನು ನೋಡಿ, ಜಿಂಕೆ ಎಂದು ಪರಿಭವಿಸಿ, ಬೇಡನೊಬ್ಬ ಕೃಷ್ಣನಿಗೆ ಬಾಣಬಿಟ್ಟು, ಕೃಷ್ಣಾವತಾರ ಕೊನೆಗೊಳಿಸಿದ ಎಂದು ಮೇಧಾವಿಗಳು ವಿಶ್ಲೇಷಿಸುತ್ತಾರೆ.
ಇಲ್ಲೇ ಉದ್ಭವ ಆಯ್ತು ಒಂದು ಪ್ರಶ್ನೆ. ವಾಲಿ, ತಾನೇ ಹೇಳಿದ ತಾವು ಮೃಗಗಳು ನಾವು ಯಾರ ಹೆಂಡತಿಯನ್ನಾದರೂ ಇಟ್ಟುಕೊಳ್ಳಬಹುದು ಎಂದು. ಹಾಗಿದ್ದಲ್ಲಿ, ಮರೆಯಲ್ಲಿ ನಿಂತು ಒಂದು ಮೃಗಕ್ಕೆ ಬಾಣ ಹೊಡೆದದ್ದು ತಪ್ಪಲ್ಲವಲ್ಲ. ಅಥವಾ ಬೇಟೆಯ ನಿಯಮದ ಪ್ರಕಾರ ತಿನ್ನುವುದಾದಲ್ಲಿ ಮಾತ್ರ ಮರೆಯಿಂದ ಪ್ರಾಣಿ ಹತ್ಯೆ ಮಾಡಬಹುದೇ? ಆಮೇಲೇ, ಸರಿಯೇ ತಪ್ಪೇ, ವಾಲಿಯನ್ನು ಕೊಲ್ಲಬೇಕಾದರೆ, ಅವನಿಗೆ ಗೊತ್ತಾಗದಂತೆಯೇ ಕೊಲ್ಲಬೇಕಿತ್ತಲ್ಲ (ಅವನ ವರದ ದೆಸೆಯಿಂದ).
ಪಾಪ ಕೃಷ್ಣಾವತಾರದ ಕೃಷ್ಣ ಅನ್ನಿಸ್ತು ನಂಗೆ!

Saturday, June 6, 2009

ಧರ್ಮರಾಯನಿಗೆ ಶಿಕ್ಷೆ

ಯಮಧರ್ಮನ ವರಪ್ರಸಾದದಿಂದ ಜನಿಸಿದ ಯುಧಿಷ್ಠಿರ ತನ್ನ ಧರ್ಮ ಪಾಲನೆಯಿಂದ ಧರ್ಮರಾಯನೆಂದೇ ಕರೆಸಿಕೊಂಡದ್ದು ನಮಗೆಲ್ಲ ತಿಳಿದ ವಿಷಯ. ಆದರೂ ಅಶ್ವತ್ಥಾನ ಮೃತಹೊಂದಿದ ಎಂದು ಹೇಳಿದ್ದಕ್ಕೆ, ಧರ್ಮರಾಯನಿಗೆ ಒಂದು ದಿನ ನರಕವನ್ನು ನೋಡುವ ಶಿಕ್ಷೆ ವಿದಿಸಲಾಯಿತು ಎಂದು ಹೇಳುತ್ತಾರೆ. ಆ ಹೆಸರಿನ ಆನೆ ಒಂದು ನಿಜವಾಗಿ ಸತ್ತಿದ್ದರೂ, ಅದನ್ನು ಹೇಳಿದ ರೀತಿ ದ್ರೋಣಾಚಾರ್ಯರ ಮಗ ಅಶ್ವತ್ಥಾನನ ಮರಣದ ವಾರ್ತೆಯಂತಿತ್ತು. ಹೀಗಿದ್ದಾಗ ನನಗೊಂದು ಸಂದೇಹ. ಪಾಂಡವರ ಕೌರವರ ಜೋಜಿನಲ್ಲಿ ದ್ರೌಪದಿಯನ್ನೇ ಜೂಜಿಗಿಟ್ಟಿದ್ದಕ್ಕೆ, ಯಾಕೆ ಧರ್ಮರಾಯನಿಗೆ ಏನೂ ಶಿಕ್ಷೆಯ ಪ್ರಸ್ತಾಪ ಆಗಿಲ್ಲ?

/* ಈ ಪ್ರಶ್ನೆಗೆ ಉತ್ತರಿಸಲು ಎಲ್ಲರಿಗೂ ಆಹ್ವಾನವಿದೆ. */