Wednesday, December 21, 2011

ಹೊಸಗುಂದದ ಇತಿಹಾಸ - ೨

ಈ ದೇವಾಲಯ ಇಲ್ಲಿನ ಜನರಿಗೆ ಮಾತ್ರ ತಿಳಿದಿತ್ತಾದರೂ, ಆಗೊಮ್ಮೆ ಈಗೊಮ್ಮೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಚರಿತ್ರೆ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ವಾಸ್ತುಶಿಲ್ಪ ತಜ್ಞರು ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದುಂಟು. ಕೆಲವೊಂದು ಪತ್ರಿಕೆಗಳಲ್ಲಿ ವಾಸ್ತುಶಿಲ್ಪ ತಜ್ಞರು ಹೊಸಗುಂದದ ಬಗ್ಗೆ ಲೇಖನಗಳನ್ನು ಬರೆದದ್ದು ಇದೆ. ಆದರೆ ಇದು ಅಷ್ಟೇನೂ ಸುದ್ದಿ ಮಾಡಿರಲಿಲ್ಲ ಅಥವಾ ಮಹತ್ವವನ್ನು ಪಡೆದುಕೊಳ್ಳಲಿಲ್ಲ.


ಕಾರಣಾಂತರದಿಂದ ಅಪ್ಪ ಹೊಸಗುಂದದ ನಮ್ಮ ಜಮೀನನ್ನು ದಕ್ಷಿಣ ಕನ್ನಡ ಮೂಲದ ನಾರಾಯಣ ಶಾಸ್ತ್ರೀ ಎನ್ನುವವರಿಗೆ ಮಾರಿದರು. ಅವರು ಈ ದೇವಸ್ಥಾನದ ಪುನರುತ್ಥಾನದ ಕಾರ್ಯವನ್ನು ಆರಂಭಿಸಲು ಮುಂದಾದರು. ಅದಕ್ಕಾಗಿ ಒಂದು ಸಮಿತಿ ಕೂಡ ರಚನೆ ಆಯಿತು. ಸುಮಾರು ೨೦೦೦-೨೦೦೧ ರಿಂದಲೂ ಪುನರುತ್ಥಾನದ ರೂಪುರೇಷೆಗಳ ಮಾತುಕತೆ ಶುರು ಆಗಿತ್ತಾದರೂ, ೨೦೦೪-೦೫ ರ ಸಮಯದಲ್ಲಿ ಪುನರುತ್ಥಾನದ ಕಾರ್ಯ ಪ್ರಾರಂಭ ಆಗಿದೆ. ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯಸಾಗುತ್ತಿದೆ.


ಎಷ್ಟೇ ಮುಂದುವರಿದಿದ್ದರೂ ಈಗಲೂ ಹಳೆಯ ದೇವಾಲಯಗಳು, ಭಗ್ನವಾದ ವಿಗ್ರಹಗಳು ಅಂದರೆ ಜನ ಭಯಪಡುತ್ತಾರೆ. ಅದು ಹೇಗೆ ಅವಸನವಾಗಿತ್ತೋ, ಅದನ್ನು ನಾವು ಈಗ ಮುಟ್ಟಿದರೆ ನಮಗೆ ಎಲ್ಲಿ ಕೆಡಾಗುವುದೋ ಎಂಬ ಆತಂಕ ಜನಕ್ಕೆ. ಕೇರಳ ಹಾಗು ದಕ್ಷಿಣ ಕನ್ನಡದಲ್ಲಿ "ಅಷ್ಟಮಂಗಳ ಪ್ರಶ್ನೆ" ಎನ್ನುವ ಸಂಪ್ರದಾಯ/ ಪದ್ಧತಿ ಒಂದಿದೆ. ಇದು ಕೇರಳ ಹಾಗು ಗಡಿ ಭಾಗಗಳಲ್ಲಿ ತುಂಬಾ ಪ್ರಸಿದ್ದಿ ಪಡೆದಿದೆ ಮತ್ತು ಪ್ರಚಲಿತದಲ್ಲಿದೆ. ದಕ್ಷಿಣ ಕನ್ನಡದವರಾದ ಶಾಸ್ತ್ರೀಯವರು ಹೊಸಗುಂದದಲ್ಲಿ "ಅಷ್ಟಮಂಗಳ ಪ್ರಶ್ನೆ" ಕಾರ್ಯಕ್ರಮವನ್ನು ಏರ್ಪಡಿಸಿದರು. ಇದು ನಮ್ಮ ಕಡೆ ಹೊಸದಾದುದ್ದರಿಂದ ಇದನ್ನು ನೋಡಲು ಎಲ್ಲೆಲ್ಲಿಂದಲೋ ಜನ ಬಂದಿದ್ದರು.

ಅಷ್ಟಮಂಗಳ ನಡೆಸುವ ಜ್ಯೋತಿಷಿಗಳು ಅಥವಾ ಪಂಡಿತರ ಜೊತೆ ವಾಸ್ತುಶಿಲ್ಪ ತಜ್ಞರನ್ನು ಕೂಡ ಆಹ್ವಾನಿಸಲಾಗಿತ್ತು. ಇವರಿಬ್ಬರು ಜಂಟಿಯಾಗಿ ಅನೇಕ ಶಾಸನಗಳು, ವಿಗ್ರಹಗಳು, ಇಲ್ಲಿನ ಚರಿತ್ರೆಯನ್ನು ತೆರೆದಿಟ್ಟರು ಹಾಗು ಪುನರುತ್ಥಾನ ಮಾಡಿದರೆ ಮಂಗಳವಾಗುತ್ತದೆ, ಇದು ಮುಂದಿನ ದಿನಗಳಲ್ಲಿ ಕ್ಷೇತ್ರವಾಗಿ ಬೆಳೆಯುತ್ತದೆ ಎಂದು ಜನರ ಆತಂಕವನ್ನು ದೂರ ಮಾಡಿದರು. ಅಷ್ಟಮಂಗಳ ಪಂಡಿತರು ಕವಡೆ, ಹೂವುಗಳ ಸಹಾಯದಿಂದ ಏನೋ ಲೆಕ್ಕ ಹಾಕಿ " ಈ ದೇವಾಲಯದಿಂದ ಈ ದಿಕ್ಕಿನಲ್ಲಿ (ಉದಾಹರಣೆಗೆ ಪೂರ್ವ) ೪ ಫಾರ್ಲಂಗು ದೂರದಲ್ಲಿ ಮಣ್ಣಿನ ಕೆಳಗೆ ಒಂದು ಭಗ್ನ ವಾಗಿರುವ ವಿಗ್ರಹ ಮತ್ತು ಪಾಣಿಪೀಠ ಇದೆ, ವಿಗ್ರಹ ಮುಖ ಅಡಿಯಾಗಿ ಇದೆ, ..... ಹೀಗೆ... " ಎಂದು ಕೂತಲ್ಲೇ ಹೇಳುತ್ತಿದ್ದರೆ, ವಾಸ್ತುಶಿಲ್ಪ ತಜ್ಞರು ಅಲ್ಲಿ ಹೋಗಿ ಅಗೆದು ನೋಡಲು ಪ್ರಸನ್ನ ನಾರಾಯಣ ವಿಗ್ರಹ ದೊರೆಯಿತು. ಅದನ್ನು ನೋಡಿದ ನಾವು ನಿಜಕ್ಕೂ ಬೆರಗಾಗಿದ್ದೆವು. ಹೀಗೆ ಒಂದೊಂದೇ ವಿಗ್ರಹಗಳನ್ನೂ ಹೊರತೆಗೆದು, ದೊರೆತ ಶಾಸನಗಳಿಂದ ತಕ್ಕಮಟ್ಟಿನ ಮಾಹಿತಿ ದೊರೆಯಿತು. ಹಾಗೆಯೇ ನನ್ನ ಹಿಂದಿನ ಪೋಸ್ಟ್ ನಲ್ಲಿ ಹೇಳಿದ "ಅರ್ಧ ಕಿ.ಮೀ. ದೂರ ಇರುವ ಅವಶೇಷ" ಕಂಚಿ ಕಾಳಮ್ಮನ ದೇವಾಲಯ ಎಂದು ಸಂಶೋಧನೆ ಇಂದ ತಿಳಿದು ಬಂತು.

ಇಲ್ಲಿ ದೊರೆತಿರುವ ಮಾಹಿತಿಯ ಪ್ರಕಾರ ಸುಮಾರು ಕ್ರಿ. ಶ. ೧೧೦೦ ರಲ್ಲಿ ಹುಮ್ಚವನ್ನು (ತೀರ್ಥಹಳ್ಳಿಯ ಸಮೀಪ) ಆಳುತ್ತಿದ್ದ ಸಾಮಂತ ದೊರೆ ಹೊಸಗುಂದಕ್ಕೆ ಬಂದು ಆಳ್ವಿಕೆ ಶುರುಮಾಡಿದ. ಬಿಲ್ಲವೇಶ್ವರನ ಭಕ್ತರಾದ ಇವರು ಹೊಸಗುಂದದಲ್ಲೂ ಶಿವನ ದೇವಾಲಯವನ್ನು ನಿರ್ಮಿಸಿದರು. ಶಾಸನಗಳ ಪ್ರಕಾರ ಇವರು ಹೊಸಗುಂದವನ್ನು ಸುಮಾರು ೩೦೦ ವರ್ಷಗಳ ಕಾಲ ಆಳಿದರೆಂದು ಹೇಳಲಾಗುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಭುಜಬಲ ಹೊಸಗುಂದದ ಮೊದಲ ದೊರೆ ಎಂದು ಹೇಳಲಾಗುತ್ತಿದೆ. ಶಾಸನಗಳಲ್ಲಿ ದೊರೆತಿರುವ ಇನ್ನಿತರ ದೊರೆಗಳ ಹೆಸರು ಬೊಮ್ಮರಸ (ಕ್ರಿ. ಶ. ೧೧೫೨), ಕಾಳರಸ, ಬೀರರಸ (ಕ್ರಿ.ಶ. ೧೧೬೪-೧೧೯೪), ಬೊಮ್ಮರಸ-೨ (ಕ್ರಿ.ಶ ೧೧೯೪-೧೨೨೦), ಅಳಿಯ ಬೀರರಸ/ಹೊನ್ನಲ ದೇವಿ (ಕ್ರಿ.ಶ. ೧೨೨೦-೧೨೨೯), ಬಲದೇವ (ಕ್ರಿ.ಶ. ೧೨೨೯-೧೨೫೭)ಬೊಮ್ಮರಸ-೩ (ಕ್ರಿ.ಶ. ೧೨೫೭-೧೨೭೮), ಬೀರರಸ (ಕ್ರಿ.ಶ.೧೨೭೮-೧೨೮೩),ತಮ್ಮರಸ(ಕ್ರಿ.ಶ.೧೨೮೩-೧೨೮೮), ಸೊದ್ದಲದೇವ (ಕ್ರಿ.ಶ. ೧೨೮೮-೧೩೦೨), ಕೋಟಿನಾಯಕ ಮತ್ತು ಸೊಮೇ ನಾಯಕ (ಸುಮಾರು ಕ್ರಿ.ಶ.೧೩೦೨- ೧೩೨೦).

ಈಗ ದೇವಾಲಯದಲ್ಲಿ ಪ್ರಸನ್ನ ನಾರಾಯಣ, ಉಮಾಮಹೇಶ್ವರ, ಕಂಚಿ ಕಾಳಮ್ಮ ವಿಗ್ರಹಗಳನ್ನು ಪೂಜಿಸಲಾಗುತ್ತಿದೆ. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ವಿಗ್ರಹಗಳು ಮೂಲ ದೇವಾಲಯದ ಒಳಗೆ ಇಲ್ಲ. ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಸ್ವಲ್ಪ ಆಳ ತೋಡಿದ್ದರಿಂದ ಈಗ ಇದು ನೀರಿಂದ ತುಂಬಿದೆ. ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ನವರು ಕೂಡ ಹೊಸಗುಂದದ ಪುನರುತ್ಥಾನಕ್ಕೆ ಕೈ ಜೋಡಿಸಿದ್ದಾರೆ. ರಾಮಚಂದ್ರಾಪುರ ಮಠದಿಂದಲೂ ಸಹಾಯ ಒದಗಿದೆ. ಹಾಗು ಸ್ಥಳೀಯರು ಕೂಡ ಕೈ ಜೋಡಿಸಿದ್ದಾರೆ. ಇಲ್ಲಿರುವ ಕಾಡನ್ನು ಸಂರಕ್ಷಿಸಲು ಇದನ್ನು "ದೇವರ ಕಾಡು" ಎಂದು ಘೋಷಿಸಿ, ಮರ ಕಡಿಯುವುದನ್ನು(ಕದಿಯುವುದನ್ನು!) ನಿಷೇಧಿಸಲಾಗಿದೆ. ಒಟ್ಟಾರೆ ಅವಸಾನದ ಹಾದಿಯಲ್ಲಿದ್ದ ಹೊಸಗಂದ ಪುನ:ಚೇತನಗೊಳ್ಳುತ್ತಿದೆ.

ಹೊಸಗುಂದದ ಇತಿಹಾಸ - ೧


ನಾನು ಸುಮಾರು ೫-೬ ವರ್ಷದವಳಾಗಿದ್ದಾಗ ನಮ್ಮ ಮನೆ ಇದ್ದದ್ದು ಹೊಸಗುಂದ ಎಂಬ ಹಳ್ಳಿಯಲ್ಲಿ. ಇದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು ೧೫-೧೬ ಕಿ.ಮೀ. ದೂರದಲ್ಲಿ ಇದೆ. (ಸಾಗರ- ಶಿವಮೊಗ್ಗ ರಸ್ತೆಯಲ್ಲಿ). ಅದು ತುಂಬಾ ಕಾನನ ಪ್ರದೇಶ. ನಮ್ಮ ಮನೆಯ ಸುತ್ತ ಮುತ್ತ ದಟ್ಟ ಕಾಡೆ ಇತ್ತು. ಈ ಊರಿನಲ್ಲಿ ಇದ್ದದ್ದೇ ೪-೫ ಮನೆಗಳಿರಬಹುದು. ನಮ್ಮನೆಯಿಂದ ಇನ್ನೊಂದು ಮನೆ ಸುಮಾರು ಮುಕ್ಕಾಲು ಕಿ.ಮೀ. ಮದ್ಯ ಕಾಡು, ದೊಡ್ಡ ಕೆರೆ. ನನ್ನ ಶಾಲೆ ಸುಮಾರು ಎರಡು ಕಿ.ಮೀ. ಜೊತೆಗೂಡಿ ಹೋಗಲು ಯಾರು ಇಲ್ಲ, ಒಬ್ಬಳೇ ಹೋಗುವಷ್ಟು ದೊಡ್ದವಳಲ್ಲ. ಪ್ರತಿದಿನ ಅಪ್ಪನ ಜೊತೆ ಸೈಕಲ್ಲಿನಲ್ಲಿ ಶಾಲೆಗೆ ನನ್ನ ಪ್ರಯಾಣ. ಸಂಜೆ ಆಗುತ್ತಲೇ ಮನೆಯ ಹಿತ್ತಲಿಗೆ, ತೋಟಕ್ಕೆ ದಾಳಿ ಇಡುವ ಕಾಡು ಹಂದಿಗಳು, ಕಾಡು ಎಮ್ಮೆಗಳು.... ಹೀಗೆ ಈ ಹೊಸಗುಂದವನ್ನು ಒಂದು ಕುಗ್ರಾಮ ಅಂತ ನೀವು ಕಲ್ಪನೆ ಮಾಡಿಕೊಳ್ಳಬಹುದಿತ್ತು.


ಇಲ್ಲಿದ್ದ ಕಾಡಿನ ಮರಗಳು ತುಂಬಾ ಹಳೆಯ ಮರಗಳು ಎಂಬುದನ್ನ ಅದರ ಕಾಂಡದ ಗಾತ್ರ ಮತ್ತು ಎತ್ತರ ನೋಡಿದರೆ ಹೇಳಬಹುದಿತ್ತು. ಈ ಕಾಡಿನಲ್ಲಿ ಅನೇಕ ಸಸ್ಯ ಪ್ರಭೇದಗಳು, ಅನೇಕ ವಿಧದ ಹಾವುಗಳು, ಅನೇಕ ಕೀಟ, ಪಕ್ಷಿಗಳು ಕಾಣಸಿಗುತ್ತಿದ್ದವು. ಕೆಲವೊಂದು ಮರಗಳು "ಜೇನು ಮರ " ಎಂದೇ ಪ್ರಸಿದ್ದಿ ಆಗಿತ್ತು. ಈ ಮರದಲ್ಲಿ ದೊಡ್ಡ ದೊಡ್ಡ ಜೇನಿನ ತತ್ತಿಗಳನ್ನು ಕಾಣಬಹುದಿತ್ತು. ನಮ್ಮನೆ ಗದ್ದೆ ಮತ್ತು ತೋಟದ ಗಡಿಯನ್ನು ದಾಟಿದರೆ ಈ ಕಾಡು. ಈ ಕಾಡನ್ನು ಒಮ್ಮೆ ಪ್ರವೇಶಿಸಿದರೆ ಮತ್ತೆ ಹೊರಬರುವವರೆಗೆ ಬಿಸಿಲು ತಾಗುತ್ತಿರಲಿಲ್ಲ ಅಷ್ಟು ದಟ್ಟ ಕಾಡು. ಇಂತಹ ಕಾಡಿನಲ್ಲಿ ಒಂದು ಪಾಳುಬಿದ್ದ ದೇವಸ್ಥಾನ ಇತ್ತು. ನಮ್ಮನೆಗೆ ಯಾರದ್ರು ನೆಂಟರು ಬಂದಾಗ ಅಪ್ಪ ಅವರನ್ನ ಅಲ್ಲಿಗೆ ಕರೆದುಕೊಂಡು ಹೋಗಿ ದೇವಸ್ಥಾನ ತೋರಿಸುತ್ತಿದ್ದಿದ್ದುಂಟು. ಇದು ಮಾಮೂಲಿ ದೇವಸ್ಥಾನ ಆಗಿರಲಿಲ್ಲ. ಈ ದೇವಸ್ಥಾನದ ಸುತ್ತ ದೊಡ್ಡ ಅಗಳ (ಕಂದಕ) ಇತ್ತು. ನೋಡಿದರೆ ಕೋಟೆಯ ಅಗಳ ಅನ್ನುವಂತಿತ್ತು. ಒಂದು ಕಲ್ಯಾಣಿ ಕೂಡ ಇತ್ತು. ಮಳೆಗೆ ಕೊಚ್ಚಿಕೊಂಡು ಬರುವ ಮಣ್ಣು, ಮರದ ಎಲೆಯಿಂದ ಆ ಕಲ್ಯಾಣಿ ಮುಚ್ಚಿಹೋಗಿತ್ತು, ಆದರೆ ಕಲ್ಲು ಕಟ್ಟಿ ಮಾಡಿದ ಗುರುತು ಇರುವುದರಿಂದ ಕಲ್ಯಾಣಿ ಎಂದು ಹೇಳಬಹುದಿತ್ತು. ದೇವಸ್ಥಾನದ ಸುತ್ತ ಮುತ್ತ ಸುಮಾರು ಶಿಲಾ ಶಾಸನಗಳನ್ನ ಕಾಣಬಹುದಿತ್ತು. ಈ ದೇವಾಲಯದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ, ಬಾಗಿಲಿನ ಚೌಕಟ್ಟು ಎನ್ನಬಹುದಾದ ಆಕಾರದ ಸುಂದರ ಕಲ್ಲಿನ ಕೆತ್ತಿನೆವುಳ್ಳ ಅವಶೇಷ ಕೂಡ ಇತ್ತು. ಅದರ ಸುತ್ತ ಮುತ್ತ ಸಹ ಶಾಸನಗಳು, ಸಣ್ಣ ಸಣ್ಣ ಕಲ್ಲಿನ ವಿಗ್ರಹಗಳು ನೋಡಸಿಗುತ್ತಿದ್ದವು. ಇದು ಯಾವುದೊ ಕಾಲದಲ್ಲಿ ರಾಜರ ಸಂಸ್ಥಾನವಾಗಿದ್ದಿರಬಹುದೆಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅಲ್ಲಿರುವ ಶಿಲಾ ಶಾಸನವನ್ನು ಓದಿ ಅಧ್ಯಯನ ಮಾಡಲು ಯಾರು ಇರಲಿಲ್ಲ. ಲಿಪಿ ಅರ್ಥವಾಗುತ್ತಿರಲಿಲ್ಲ.

ಅಲ್ಲಿ ಓಡಾಡುವಾಗ ಯಾವುದಾದರು ಶಾಸನ ಕಾಲಿಗೆ ಎಡವಿದರೆ, ಅದನ್ನು ಎತ್ತಿ ನಿಲ್ಲುಸುವ ಕೆಲಸವನ್ನಂತೂ ನಮ್ಮಪ್ಪ ಹಾಗು ನಮ್ಮ ಮನೆಯವರು ಮಾಡಿದ್ದರು. ಗದ್ದೆಯಲ್ಲೋ ತೋಟದಲ್ಲೋ ಅಗೆಯುವಾಗ, ಕೆಲಸ ಮಾಡುವಾಗ ಸಿಕ್ಕಿರುವ ಭಗ್ನವಾಗಿರುವ ಕಲ್ಲಿನ ವಿಗ್ರಹಗಳನ್ನು ಸಂರಕ್ಷಿಸಿದ್ದಾರೆ. ನಮ್ಮನೆ ಮಾತ್ರ ಅಲ್ಲ ಈ ಊರಿನಲ್ಲಿ ಎಲ್ಲ ಕಡೆ ಈ ಥರ ವಿಗ್ರಹಗಳು, ಶಾಸನಗಳು ಕಾಣಸಿಗುತ್ತಿದ್ದವು. ತೋಟದಲ್ಲಿ, ಗದ್ದೆಯಲ್ಲಿ ಸಸಿ ನೆಡಲು ಅಗೆಯುವಾಗ ಕೆಲವರಿಗೆ ಬಂಗಾರದ ವಸ್ತುಗಳು ಕೂಡ ದೊರಕಿವೆ ಎಂಬ ವದಂತಿ ಇತ್ತು. ಎಷ್ಟು ನಿಜವೋ ಗೊತ್ತಿಲ್ಲ!! ಏನೆ ಇರಲಿ ಇದೆಲ್ಲದರಿಂದ ಇಲ್ಲಿ ರಾಜರ ಆಳ್ವಿಕೆ ಇತ್ತು ಎಂಬುದು ಸಾಬೀತಾಗುತ್ತದೆ.

ದೇವಸ್ಥಾನದ ಗರ್ಭ ಗುಡಿ ಖಾಲಿ ಇತ್ತು. ಆದರೆ ಗರ್ಭ ಗುಡಿಯ ಹೊರಗೆ ಒಂದು ನಂದಿಯ ವಿಗ್ರಹ ಹಾಗು ಮೆಟ್ಟಿಲಿನ ಎರಡೂ ಪಕ್ಕದಲ್ಲಿ ಒಂದೊಂದು ಆನೆ ಇದ್ದಿದನ್ನು ನೋಡಿದವರು ಇದ್ದಾರೆ. ಆದರೆ ಅದು ನಾನು ದೇವಸ್ಥಾನವನ್ನು ನೋಡುವ ಕಾಲಕ್ಕೆ ಮಾಯವಾಗಿತ್ತು. ಯಾವೊದೋ ಊರಿನವರು ಅದನ್ನು ಕದ್ದೊಯ್ದು ತಮ್ಮೂರಿನ ದೇವಸ್ಥಾನದಲ್ಲಿ ಇಟ್ಟಿದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು!! ಒಟ್ಟಾರೆ ಈ ದೇವಸ್ಥಾನ ಸುಮಾರು ೧೯೯೧-೯೨ ರಲ್ಲೇ ದೇವರಿಲ್ಲದ ಆಸ್ಥಾನವಾಗಿತ್ತು. ನಂದಿ ಇದ್ದದ್ದನ್ನು ನೋಡಿದವರು ಇದು ಶಿವನ ದೇವಾಲಯ ಅಂತ ಹೇಳುತ್ತಿದ್ದರು. ಈ ಮುಖ್ಯ ದೇವಾಲಯದ ಪಕ್ಕ ದಕ್ಷಿಣಕ್ಕೆ ಮುಖವಾಗಿರುವ ಇನ್ನೊಂದು ಪುಟ್ಟ ಗುಡಿ ಇತ್ತು. ಅದರಲ್ಲೂ ದೇವರು ಇರಲಿಲ್ಲ. ಜನ ತಮ್ಮ ತಮ್ಮ ಬುದ್ಧಿಗೆ ನಿಲುಕಿದಂತೆ ಯಾವ ದೇವರಿದ್ದಿರಬಹುದೆಂದು ಊಹೆ ಮಾಡುತ್ತಿದ್ದರು. ಮುಖ್ಯ ದೇವಾಲಯದ ದೇವರು ಶಿವ ಆಗಿರುವುದರಿಂದ ಈ ಗುಡಿ ಪಾರ್ವತಿಯದ್ದಾಗಿರಿತ್ತದೆ ಎಂಬುದು ಕೆಲವರ ವಾದವಾದರೆ ಇನ್ನು ಕೆಲವರು ಇದು ವೀರಭದ್ರನ ಗುಡಿ ಎಂದು ಹೇಳುತ್ತಿದ್ದರು.

ದೇವರಿಲ್ಲದೆ ಒಂದು ರೀತಿ ಹಾಳು ಬಿದ್ದಿದ್ದ ದೇವಾಲಯ, ಪ್ರಕೃತಿಯಿಂದಾಗಿ ಕೂಡ ಅವಸಾನದ ಹಾದಿ ಹಿಡಿದಿತ್ತು. ಮಲೆನಾಡಿನ ಮಳೆ ಹಾಗು ಸಿಡಿಲಿಗೆ ದೇವಾಲಯದ ಕೆಲವು ಆಧಾರ ಸ್ತಂಭಗಳು ಬಿರುಕು ಬಿಟ್ಟಿದ್ದರೆ, ಮರದ ದೊಡ್ಡ ದೊಡ್ಡ ಬೇರುಗಳು ದೇವಾಲಯದ ಅಡಿಗೆ ಹಾದು ಹೋಗಿ ಕಲ್ಲಿನ ಗೋಡೆಗಳನ್ನು ಶಿಥಿಲಗೊಳಿಸಿದ್ದವು. ಒಂದು ಮುಖ್ಯ ಆಧಾರ ಸ್ತಂಭವಂತೂ ಬೇರು ಒಳಹೊಕ್ಕಿದ ಪರಿಣಾಮವಾಗಿ ವಾಲಿಹೋಗಿತ್ತು. ಒಟ್ಟಾರೆ ಅವಸಾನದ ಹಾದಿಯಲ್ಲಿ ಇತ್ತು. ಆದರೂ ದೇವಸ್ಥಾನದ ಮೇಲ್ಛಾವಣಿಯ ಮೇಲಿದ್ದ ಕಲಾತ್ಮಕ ಕೆತ್ತನೆಗಳು, ಒಂದೇ ಕಲ್ಲಿನಿಂದ ಮಾಡಲ್ಪಟ್ಟ ರಂಗಸ್ಥಳ, ಕಲ್ಲಿನ ಗೋಡೆಗಳ ಮೇಲೆ ಇದ್ದ ಕೆತ್ತನೆಗಳು ದೇವಸ್ಥಾನದ ಅಂದವನ್ನು ಕಾಪಾಡಿತ್ತು.

ನಿಮಗೇ ತಿಳಿದಂತೆ ಭಾರತದ ಪುರಾತನ ವಿಗ್ರಹಗಳಿಗೆ ವಿದೇಶಗಳಲ್ಲಿ ನಾವು ಕಲ್ಪಿಸಿಕೊಳ್ಳಲು ಸಾಧ್ಯವಿರದಷ್ಟು ಬೆಲೆ ಇದೆ. ಇದನ್ನು ಅರಿತಿದ್ದ ಕೆಲವು ಶ್ರೀಮಂತರು, " ಆ ದೇವಸ್ಥಾನದ ಮುಖ್ಯ ಬಾಗಿಲನ್ನು (ವಾಸ್ತು ಬಾಗಿಲು) ಕೀಳಿಸಿಕೊಡುತ್ತಿರಾ ನಿಮಗೆ ದುಡ್ಡು ಕೊಡುತ್ತೇವೆ" ಎಂದು ಊರಿನವರನ್ನು ಕೇಳಿದವರೂ ಇದ್ದಾರೆ!! ಅದನ್ನು ಉದ್ಧಾರ ಮಾಡಲು ಆಗದೇ ಇದ್ದರೂ ಹಾಳು ಮಾಡುವ ಕೆಲಸವನ್ನಂತೂ ಮಾಡಬಾರದು ಎಂದು ನಂಬಿದವರು ಹಳ್ಳಿಯವರು. ಅದ್ದರಿಂದ ವಾಸ್ತು ಬಾಗಿಲು, ವಿಗ್ರಹಗಳು ದೇವಾಲಯದಲ್ಲೇ ಉಳಿದುಕೊಂಡವು.
ಕುಗ್ರಾಮವಾಗಿದ್ದ ಹೊಸಗುಂದ ಈಗ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಆಗಿದೆ. ವಿದೇಶಿ ಪ್ರವಾಸಿಗರು, ವಿದೇಶಿ ವಿಶ್ವವಿದ್ಯಾನಿಲಯದ ಅಧ್ಯಯನ ತಂಡಗಳು ಇಲ್ಲಿಗೆ ಭೇಟಿನೀಡುತ್ತಿವೆ. ಕಾರಣ ಅನೇಕರ ಶ್ರದ್ಧೆ ಮತ್ತೆ ಶ್ರಮದ ಫಲವಾಗಿ ದೇವಾಲಯದ ಪುನರುತ್ಥಾನ ಕಾರ್ಯ ಆರಂಭ ಆಗಿದೆ.  ಹೇಗೆ, ಏನು, ಇನ್ನೊಂದು ಭಾಗದಲ್ಲಿ ಬರೀತೀನಿ.