Friday, July 22, 2011

ಪಾಂಡವರ ಧರ್ಮದ ಮಧ್ಯೆ ದ್ರೌಪದಿ ವಸ್ತ್ರಾಪಹರಣ

ಬಹಳ ದಿನಗಳ ಹಿಂದೆ ಒಂದು ಪ್ರಶ್ನೆಯನ್ನು ಕೇಳಿದ್ದೆ. ಧರ್ಮರಾಯನಿಗೆ ಶಿಕ್ಷೆ ಎನ್ನುವ ಶೀರ್ಷಿಕೆಯಡಿಯಲ್ಲಿ. ಆ ಪ್ರಶ್ನೆಗೆ ಉತ್ತರಿಸುತ್ತ ಹೊಸಮನೆಯವರು, "ದ್ರೌಪದಿ ಕೂಡ ಜೂಜಿನಲ್ಲಿ ಅವಳನ್ನು ಒತ್ತೆ ಇಟ್ಟಿದ್ದಕ್ಕೆ ಆಕ್ಷೆಪಿಸಲಿಲ್ಲ. ಆದರೆ ತನ್ನನ್ನು ತಾನು ಸೋತ ನಂತರ ಧರ್ಮರಾಯ ಅವಳನ್ನು ಪಣವಾಗಿ ಒಡ್ಡುವುದು ಯಾವ ಧರ್ಮ ಎಂದು ಪ್ರಶ್ನಿಸುತ್ತಾಳೆ" ಎಂದು ಹೇಳಿದ್ದಾರೆ.
ಮೊನ್ನೆ ಮೊನ್ನೆ, ಕುಮಾರವ್ಯಾಸ ಕಥಾಮಂಜರಿಯ ಸಭಾಪರ್ವವನ್ನು ಓದಿ ಮುಗಿಸಿದೆ. ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶವನ್ನು ಓದಿದಾಗ ಅಂದಿನ ಪ್ರಶ್ನೆ ಮತ್ತೆ ಉದ್ಭವಿಸಿತು. "ತನ್ನನ್ನು ತಾನು ಸೋತ ನಂತರ ಹೇಗೆ ಪರರನ್ನು ಜೂಜಿನಲ್ಲಿ ಒತ್ತೆ ಇಡಲು ಸಾಧ್ಯ? ಇದು ಧರ್ಮವೇ?" ಎಂದು ಕೇಳಿದಾಗ, ಭೀಷ್ಮಾದಿಗಳನ್ನೋಳಗೊಂಡು, ಆಸ್ಥಾನದಲ್ಲಿದ್ದ ಯಾರೂ ಮಾತನಾಡುವುದಿಲ್ಲ. ಇದು ಏಕೆಂದು ನನಗೆ ಗೊಂದಲವಾಯಿತು. ಯೋಚಿಸಿದಾಗ ಒಂದು ಸಾಧ್ಯತೆ ಗಮನಕ್ಕೆ ಬಂತು. ಧರ್ಮರಾಯ ಸೋತಾಗಿತ್ತು. ಕೌರವನ ಕಿಂಕರನಾಗಿಯಾಗಿತ್ತು. ಆ ನಂತರ ಗೆದ್ದವರು ಹೇಳಿದಂತೆ ಅವನು ಕೇಳುವುದು ಧರ್ಮ. ಅವರು ವಡ್ಡು ಏನೆಂದು ಕೇಳಿದರು. ಇವನು ಹೇಳಿದ. ಇವನು ಹೇಳಿದ್ದನ್ನು ಅವರು ಒಪ್ಪಿದರು. ಹಾಗಾಗಿ ಇಲ್ಲಿ ಧರ್ಮದ ಉಲ್ಲಂಘನೆ ಆಗಿಲ್ಲ ಅನ್ನಿಸಿತು.
ಇನ್ನು ಪ್ರಾಣಕ್ಕಿಂತ ಮಾನ ದೊಡ್ಡದು ಎಂದು ಎಷ್ಟೋ ಕಡೆ ಓದುತ್ತೇವೆ, ಕೇಳುತ್ತೇವೆ. ತಮ್ಮ ಪಟ್ಟದರಸಿಯ ಮಾನಕ್ಕೆ ಸಂಚಕಾರ ಬಂದಾಗಲೂ ಧರ್ಮ ಎನ್ನುತ್ತಾ, ಸುಮ್ಮನಿದ್ದ ಧರ್ಮರಾಯಾದಿ ಪಾಂಡವರು ಮಾಡಿದ್ದು ಸರಿಯೇ? ಧರ್ಮ, ಹಾಗಾದರೆ ಮಾನಕ್ಕಿಂತಲೂ ಉನ್ನತವಾದದ್ದೇ! ಇಂದಿಗೂ?!

Monday, July 18, 2011

ಹಳೆಗನ್ನಡದ ಪುರಾಣ......

ನಾನು ಸ್ಕೂಟರ್ ನಿಲ್ಲಿಸಿದಾಗ ನಮ್ಮ ಆಫೀಸಿನ ಸೆಕ್ಯೂರಿಟೀ ಗಾರ್ಡ್ ಎಂದಿನಂತೆ ಗಾಡಿಯ ನಂಬರ್ ಅನ್ನು ಬರೆದುಕೊಂಡು ನನ್ನ ಸ್ಕೂಟರ್ ಪಕ್ಕ ನಿಲ್ಲಿಸಿದ ಬೈಕಿನತ್ತ ಕಣ್ಣು ಹಾಯಿಸಿ, ಅಲ್ಲೇ ಹತ್ತಿರದಲ್ಲಿ ಇದ್ದ ಇನ್ನೊಬ್ಬ ಸೆಕ್ಯೂರಿಟೀ ಗಾರ್ಡ್ ಅನ್ನು ಕೈಸನ್ನೆ ಮಾಡಿ ಕರೆದ. ಆ ಬೈಕಿನ ನಂಬರ್ ಪ್ಲೇಟ್ ಅನ್ನು ಕನ್ನಡ ಅಂಕೆಯಲ್ಲಿ ಬರೆಯಲಾಗಿತ್ತು .ಅವನು ಬಂದು ಕೆಎ-೦೫ ಹೆಚ್ ೧೯೮೯ ಅಂತ ಓದಿ ಹೇಳಿದ. ಸೆಕ್ಯೂರಿಟೀ ಗಾರ್ಡ್ ಗಳಲ್ಲಿ ಹೆಚ್ಚಿನವರು ಉತ್ತರ ಅಥವಾ ಈಶಾನ್ಯ ಭಾರತದವರಾಗಿರುತ್ತಾರೆ. ಕುತೂಹಲಕ್ಕೆ ಕೇಳಿದೆ- " ಅವರಿಗೆ ಕನ್ನಡ ಬರಲ್ವಾ?" ಅಂತ. ಅದಕ್ಕೆ ಅವನು - "ಇಲ್ಲ ಮೇಡಮ್, ಅವರು ಕನ್ನಡದವರೇ , ಆದ್ರೆ ಇದು ಹಳೆಗನ್ನಡದಲ್ಲಿ ಇದ್ಯಲ್ಲಾ ಅದ್ಕೆ ಓದಕ್ಕೆ ಬರಲ್ಲ. ನಂಗೆ ಬರುತ್ತೆ ಮೇಡಮ್ ಅನ್ನುವುದೇ?!"